Wednesday, July 1, 2009

ನನ್ನಮ್ಮ ಗ್ರೇಟ್...


ಅಮ್ಮನ ಬಗ್ಗೆ ಯೋಚಿಸುವಾಗಲೆಲ್ಲಾ ಅವ್ಳು ಬೇರೆಯವರಿಗಿಂತ ಇನ್ನೂ ಡಿಫರೆಂಟ್ ಅಂತ ಯಾವಾಗ್ಲೂ ಅನ್ನಿಸ್ತಿತ್ತು. ಎಲ್ರಿಗೂ ಹೀಗೇ ಅನ್ನಿಸ್ತದೋ ಏನೋ ಗೊತ್ತಿಲ್ಲ. ನನ್ನ ಜೀವನದಲ್ಲಿ ಆಕೆ ಮಾಡಿದ ಎಲ್ಲವೂ ತುಂಬಾ ವಿಶೇಷವಾಗಿ ಕಾಣ್ತಾ ಇದೆ. ಅದೇ ತರಹದ ಅಮ್ಮನಾಗಿ ನಾನು ಇರಬಲ್ಲೆನೇ ಅನ್ನುವ ಪ್ರಶ್ನೆ ನನ್ನನ್ನು ಯಾವಾಗ್ಲೂ ಕಾಡ್ತಾನೇ ಇರುತ್ತದೆ. ನಾನೂ ನನ್ನ ಅಮ್ಮನ ತರಹ ತ್ಯಾಗಿ, ಸಹನಶೀಲೆ, ತಾಳ್ಮೆಯ ಪ್ರತಿರೂಪ ಆಗ್ಬೇಕು ಅಂತ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥ ಆದಾಗ ನಾನು ಯೋಚಿಸಿದ್ದಿದೆ ನನ್ನ ಅಮ್ಮ ತುಂಬಾ ಗ್ರೇಟ್ ಅಂತ.ಅಪ್ಪ ಕುಡಿತದ ಚಟಕ್ಕೆ ಬಿದ್ದು ನಮಗಿದ್ದ ಹೊಟೇಲ್ ನಲ್ಲಿ ರಾತ್ರಿ ಗೊಡವೆ ಇಲ್ಲದೆ ಬಿದ್ದಿರುತ್ತಿದ್ದಾಗ ತೋಟ, ಗುಡ್ಡ, ಕಾಡಿನ ಮಧ್ಯೆ ಇದ್ದ ಮುಳಿಹುಲ್ಲಿನ ಒಂಟಿ ಮನೆಯಲ್ಲಿ ಅಮ್ಮ 3 ತಿಂಗಳ ನನ್ನ ತಮ್ಮನ ಜೊತೆ ರಾತ್ರಿ ಕಳೆಯುತ್ತಿದ್ದದ್ದನ್ನು, ತೋಟದಲ್ಲಿ ಸದ್ದಾದಾಗ ತೊಟ್ಟಿಲ ಮಗುವನ್ನು ಎತ್ತಿಕೊಂಡು ಅಡಿಕೆ ಗೋಣಿಗಳೆಡೆಯಲ್ಲಿ ಅಡಗಿ, ಹೊತ್ತು ಕಳೆಯುತ್ತಿದ್ದ ನನ್ನಮ್ಮನ ಬಗ್ಗೆ ನೆನೆಯುವಾಗ ಯಾವಾಗ್ಲೂ ಕಣ್ಣಲ್ಲಿ ನೀರಿಣುಕುತ್ತದೆ.ಆ ವಾತಾವರಣದಲ್ಲಿ ನಾನು ಬೆಳೆಯಬಾರದು ಅಂತ ನನ್ನನ್ನು ಪೇಟೆಯಲ್ಲಿರುವ ದೊಡ್ಡಮ್ಮನ ಮನೆಯಲ್ಲಿಟ್ಟು ಓದಿಸಿ, ತಿಂಗಳಿಗೊಮ್ಮೆ ಬರುವಾಗ ತನ್ನೆಲ್ಲಾ ಕಷ್ಟಗಳನ್ನು ಮುಚ್ಚಿಟ್ಟು ನನಗೆ ಬೇಕಾದದ್ದನ್ನೆಲ್ಲಾ ತೆಗೆಸಿಕೊಟ್ಟು ಹೋಗುತ್ತಿದ್ದಳು. ಆದ್ರೂ ದೊಡ್ಡಮ್ಮನ ಜೊತೆ ಅಪ್ಪ ಕೊಡ್ತಿದ್ದ ಹಿಂಸೆಯನ್ನೆಲ್ಲಾ ಹೇಳಿಕೊಂಡು ಅವಳು ಅಳುವಾಗ ಕದ್ದು ಬಾಗಿಲ ಬಳಿ ಆಲಿಸುತ್ತಿದ್ದ ನನ್ನ ಪುಟ್ಟ ಕಂಗಳು ತುಂಬಿ ಹೋಗುತ್ತಿತ್ತು.ದೊಡ್ಡವಳಾದಂತೆ ನನಗೆ ಸ್ನೇಹಿತೆ ಅವಳೆ ಆದ್ಳು. ಒಂದು ದಿನ ಅಪ್ಪ ಎಳೆದು ಬಿಸಾಡಿದ ತುಂಡು ಬೀಡಿಯನ್ನು ಆಗ ಒಂದನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನ ತಮ್ಮನಿಗೆ ಎಳೆಸಿದ್ದೆ. ಅದು ಗೊತ್ತಾಗಿ ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದು ಹೊಡೆದಿದ್ದಳು. ಅದೇ ಮೊದಲು, ಅದೇ ಕೊನೆ. ಅಮ್ಮ ನನಗೆ ಹೊಡೆದ ನೆನಪೇ ಇಲ್ಲ. ನಾನೇನೇ ತಪ್ಪು ಮಾಡಿದ್ರೂ ಅವಳ ಅಳುವೇ ಬೈಗುಳವಾಗುತ್ತಿತ್ತು. ಅದೊಂದೇ ಸಾಕಿತ್ತು ನನ್ನನ್ನು ತಿದ್ದಲು.ನಮ್ಮದು ಪ್ರೇಮ ವಿವಾಹ. ಕೆಲವು ಕಾರಣಗಳಿಗೋಸ್ಕರ ಈ ಮದುವೆಗೆ ಯಾರ ಒಪ್ಪಿಗೆಯೂ ಇರಲಿಲ್ಲ. ನನ್ನ ಮನೆಯವರಿಲ್ಲದೆ ನಾನು ಮದುವೆ ಮಾಡ್ಕೊಂಡೆ. ಆಮೇಲೆ ಕಾಡಿದ್ದೆಲ್ಲಾ ಅಮ್ಮನ ನೆನಪು ಮಾತ್ರ. ಜೊತೆಗೆ ನನಗಾಗಿ ಕುಡಿತ ಬಿಟ್ಟ ಅಪ್ಪನ ನೆನಪೂ.. ಒಂದು ವರ್ಷದ ನಂತರ ನಾನು ಅಮ್ಮನಾದಾಗ ಅನ್ನಿಸಿತು ನಮ್ಮನ್ನು ಹಡೆಯುದಕ್ಕೆ, ಸಾಕುದಕ್ಕೆ ಆಕೆ ಅದೆಷ್ಟು ಕಷ್ಟ ಪಟ್ಟಿದ್ಳು ಅಮ್ಮ. ನಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾಕೆ ಆಕೆ ಮುಖ್ಯ ಅಂತ ಅನ್ನಿಸ್ಲಿಲ್ಲ. ಮನೆಯಿಂದ ಹೊರಹೋದ ಮಕ್ಕಳನ್ನು ವಾಪಸ್ ಕರೆದುಕೊಳ್ಳುವುದು ತುಂಬಾ ಅಪರೂಪ. ಆದ್ರೆ ನನ್ನಮ್ಮ ಮತ್ತೆ ನನ್ನನ್ನು ಕರೆದ್ಳು. ಮತ್ತೆ ನನ್ನನ್ನು ಪ್ರೀತಿಯಿಂದ ತಲೆ ನೇವರಿಸಿದ್ಳು. ಎಲ್ಲಾ ಮರೆತು ನೀನು ಚೆನ್ನಾಗಿದ್ರೆ ಅಷ್ಟೇ ಸಾಕು ಅಂತ ಹೇಳಿದ್ಳು. ಆ ಮಾತೊಂದೇ ಸಾಕು ನನಗೆ, ನನ್ನಮ್ಮ ಗ್ರೇಟ್ ಅಂತ ಸಾರಿ ಸಾರಿ ಹೇಳುದಕ್ಕೆ...

3 comments:

ಇಂಚರ said...

ಇಷ್ಟು ಪಾರದರ್ಶಕವಾಗಿ ಬರೆಯುವವರು ಬಹಳ ಕಡಿಮೆ... ಬರಹ ಚೆನ್ನಾಗಿದೆ..

ಮಲ್ಲಿಕಾರ್ಜುನ.ಡಿ.ಜಿ. said...

ಹೃದಯಸ್ಪರ್ಶಿ ಲೇಖನ. ಅಮ್ಮ ಯಾವತ್ತೂ ಗ್ರೇಟ್. ಅವರಿಂದ ದೂರವಿದ್ದಾಗ ಅವರನ್ನು ತುಂಬಾ ಮಿಸ್ ಮಾಡಿಕೊಳ್ತೇವೆ.

* ನಮನ * said...

ತಂಜಾವೂರಿನ ಬೃಹದೀಶ್ವರ ದೇವಾಲಯ

ಕಾವೇರಿ ನದಿಯ ತಟದಲ್ಲಿ ಪರ್ವತದಂತೆ ನಿಂತಿರುವ ಇದು ತಂಜಾವೂರಿನ ಬೃಹದೀಶ್ವರ ದೇವಾಲಯ. ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ, 216 ಅಡಿ ಎತ್ತರವಿರುವ ಈ ದೇವಾಲಯವನ್ನು ಅಡಿಪಾಯ ಇಲ್ಲದೆ ಕಟ್ಟಲಾಗಿದೆ.

ನೀವು ನಂಬುವಿರಾ? ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಈ ದೇವಾಲಯವು ಅದರ ಆಧ್ಯಾತ್ಮಿಕತೆ, ಕಾರಣಿಕದೊಂದಿಗೆ, ನಮ್ಮ ಹಿರಿಯರ ವಾಸ್ತುಶಿಲ್ಪ ಹಾಗೂ ಚಾತುರ್ಯದಿಂದಲೂ ದಂತಕತೆಯಾಗಿದೆ. ಕ್ರಿ.ಶ 1003ರಿಂದ 1009ರ ತನಕ ರಾಜ್ಯಭಾರ ಮಾಡಿರುವ ಚೋಳ ದೊರೆ ರಾಜರಾಜ ಕಟ್ಟಿಸಿದ ಈ ಬೃಹತ್ ದೇವಾಲಯ ಇಂದಿಗೂ ಉಳಿದಿದೆ. ಈ ದೇವಾಲಯದ ಒಳಗೆ ಪ್ರವೇಶಿಸುತ್ತಿರುವಂತೆ ಗರ್ಭಗುಡಿಯಲ್ಲಿರುವ 13 ಅಡಿ ಎತ್ತರದ ಶಿವಲಿಂಗವು ಐದು ತಲೆಯ ಸರ್ಪದ ನೆರಳಿನಲ್ಲಿ ಕಂಗೊಳಿಸುತ್ತಿರುವುದು ಕಾಣಿಸುತ್ತದೆ.

ಗರ್ಭಗುಡಿಯ ಸುತ್ತಲೂ, ಆರು ಅಡಿ ಅಂತರದಲ್ಲಿ ಎರಡು ದಪ್ಪನಾದ ಗೋಡೆಗಳಿವೆ. ಹೊರಗಿನ ಗೊಡೆಯ ತುದಿಯಲ್ಲಿ ವಿಮಾನ ಎಂದು ಕರೆಯಲಾಗುವ ಗೋಪುರವನ್ನು ರಚಿಸಲಾಗಿದೆ. ಒಂದರ ಮೇಲೊಂದರಂತೆ ಕಿರಿದಾಗುತ್ತಾ ಹೋಗುವ ವಿನ್ಯಾಸವು ಅತ್ಯಂತ ಸುಂದರ, ಮನಮೋಹಕವಾಗಿದೆ. ಇಂತಹ 14 ಅಂತಸ್ತುಗಳ ಈ ವಿನ್ಯಾಸದ ಒಳಗಡೆ ಟೊಳ್ಳಾಗಿದೆ.

ಇದು ಈ ರಚನೆಯ ಸೌಂದರ್ಯ. ಗೋಪುರದ ಮೇಲ್ಭಾಗ 216 ಅಡಿ ಎತ್ತರ ಟೊಳ್ಳಾಗಿದೆ. ಅಡಿಯಲ್ಲಿ ಅಗಲವಾಗಿದ್ದು, ಮೇಲೆಮೇಲೇರುತ್ತಾ ಅಗಲ ಕಿರಿದಾಗುತ್ತದೆ. 14ನೆ ಅಂತಸ್ತಿನ ಮೇಲೆ ಒಂದು ಬೃಹದಾಕಾರದ ಗುಮ್ಮಟವಿದೆ. 88 ಟನ್ನು ತೂಗುವ ಗುಮ್ಮಟ ಈ ಸಂಕೀರ್ಣವನ್ನು ಸಮತೋಲನದಿಂದ ಹಿಡಿದಿರಿಸಿದೆ. ಇದು ಚೋಳರ ಶಿಲ್ಪಕಲಾ ಚಾತುರ್ಯವಾಗಿದೆ.
ಈ ಟೊಳ್ಳು ವಿನ್ಯಾಸವು ಶಿಲ್ಪಕಲಾ ಸೊಬಗು ಮಾತ್ರವಲ್ಲ, ಇದು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುತ್ತೇವೆ. ಆಧ್ಯಾತ್ಮಿಕವಾಗಿ ಇದನ್ನು ಭಗವಂತನ 'ಅರೂಪ' ಅಂದರೆ ರೂಪವಿಲ್ಲದ ಆರಾಧನೆ ಎಂದು ಕರೆಯಲಾಗುತ್ತದೆ. ದೇವರು ಎಲ್ಲೆಲ್ಲೂ ಇದ್ದಾನೆ ಮತ್ತು ಬ್ರಹ್ಮಾಂಡದಲ್ಲಿ ಇರುವುದರಲ್ಲೆಲ್ಲ ನೆಲೆಸಿದ್ದಾನೆ ಎಂಬುದು ನಂಬುಗೆ.

ಇಂತಹ ರಚನೆ ಇಂದಿಗೂ ಸಾಧ್ಯವೇ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಉತ್ತರ ಹೌದು. ಕನ್ಯಾಕುಮಾರಿಯಲ್ಲಿರುವ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನೂ ಇದೇ ವಾಸ್ತುಶಿಲ್ಪ ಕಲೆಯಾಧಾರದಲ್ಲಿ ನಿರ್ಮಿಸಲಾಗಿದೆ. ಈ ಮೂರ್ತಿಯೂ ಮಧ್ಯಭಾಗದಲ್ಲಿ ಟೊಳ್ಳಾಗಿದ್ದು ತಳಪಾಯ ರಹಿತವಾಗಿದೆ.

ಈ ವಿನ್ಯಾಸದಲ್ಲೂ ಕಲ್ಲುಗಳನ್ನು ಒಂದರ ಮೇಲೆ ಒಂದನ್ನಿರಿಸಲಾಗಿದ್ದು ತುತ್ತ ತುದಿಯಲ್ಲಿ ದೊಡ್ಡ ಕಲ್ಲನ್ನಿರಿಸಲಾಗಿದೆ. ತಿರುವಳ್ಳುವರ್ ಅವರ ಮುಖವನ್ನು ಬೃಹತ್ ಕಲ್ಲಿನ ಮೂಲಕ ಜೋಡಿಸಿದ್ದು, ಇದು ಇಡಿಯ ಪ್ರತಿಮೆಯನ್ನು ಸಮತೋಲನದಲ್ಲಿರಿಸಿದೆ. 2004ರಲ್ಲಿ ಈ ಪ್ರತಿಮೆಯ ಎತ್ತರಕ್ಕೆ ಸುನಾಮಿ ಅಪ್ಪಳಿಸಿದ್ದರೂ ಪ್ರತಿಮೆಗೆ ಏನೂ ಆಗಿಲ್ಲ!

ಸಾಮಾನ್ಯವಾಗಿ ದಕ್ಷಿಣ ಭಾರತದ ದೇವಾಲಯಗಳು ರಾಜಗೋಪುರವನ್ನು ಹೊಂದಿರುತ್ತದೆ. ಮತ್ತು ಗರ್ಭಗುಡಿಯ ಮೇಲಿರುವ ವಿಮಾನವು ಚಿಕ್ಕ ಗುಮ್ಮಟವಾಗಿರುತ್ತದೆ. ಆದರೆ ತಂಜಾವೂರಿನ ವಿಶ್ವಪ್ರಸಿದ್ಧ ಬೃಹದೀಶ್ವರ ಅಥವಾ ಪೆರಿಯ (ದೊಡ್ಡ) ದೇವಾಲಯದಲ್ಲಿ ವಿಮಾನವನ್ನು ಅತ್ಯಂತ ಎತ್ತರದಲ್ಲಿ ನಿರ್ಮಿಸಲಾಗಿರುವುದು ಇದರ ವಿಶೇಷ.
ಭಾರತವು ದೇವಾಲಯ ಮತ್ತು ಕೋಟೆ ಕೊತ್ತಲಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಬೃಹತ್ ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿರುವ ವಾಸ್ತುವಿನ್ಯಾಸವು ಎಲ್ಲಾ ಊಹೆಗಳನ್ನು ಮೀರಿದ್ದಾಗಿದೆ. ಈ ದೇವಾಲಯದಲ್ಲಿ 12 ಅಡಿ ಎತ್ತರ ಹಾಗೂ ಹತ್ತೊಂಬತ್ತೂವರೆ ಅಡಿ ಅಗಲದ ಏಕಶಿಲೆಯ ನಂದಿ ವಿಗ್ರಹವಿದೆ. ಇದನ್ನು 16ನೆ ಶತಮಾನದ ವಿಜಯನಗರ ಆಳ್ವಿಕೆ ಕಾಲದಲ್ಲಿ ಸ್ಥಾಪಿಸಲಾಗಿದೆ.

ಯುನೆಸ್ಕೋದ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿರುವ ಈ ದೇವಾಲಯದ ವಾಸ್ತು ವೈಭವದ ವಿಸ್ಮಯಕ್ಕೆ ನೀವೇನನ್ನುತ್ತೀರಿ?
ತಂಜಾವೂರಿಗೆ ಹೋದವರು ಇದನ್ನು ನೋಡದೆ ಬರಲಾದೀತೇ?

ನಮನಗಣೇಶ್
ಕಾರ್ಕಳ ಬಜಗೋಳಿ